ನವ ಕರ್ನಾಟಕ ಪ್ರಕಾಶನ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ....
ನಾನು ಪ್ರತಿ ಸಲ ವಿಜಯಪುರಕ್ಕೆ ಹೋದಾಗ ಗಾಂಧೀ ವೃತ್ತದ ಮುಂದಿನ ರಸ್ತೆಯಲ್ಲಿನ ನಗರ ಸಭೆ ಕಟ್ಟಡದ ಪಕ್ಕದಲ್ಲಿ ತಪ್ಪದೇ ಕಣ್ಣು ಹಾಯಿಸುತ್ತೇನೆ. ಅಲ್ಲಿ ಈಗ ಮಾಸ್ಟರ್ ಪ್ಲ್ಯಾನ್ ಬಂದು ಎಲ್ಲ ಬದಲಾಗಿದೆ. ಮೊದಲು ಅಲ್ಲಿ 'ನವಕರ್ನಾಟಕ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ' ಎಂಬ ಖಾಯಂ ಶೆಡ್ಡೊಂದು ಸದಾ ಕಾಣ ಸಿಗುತ್ತಿತ್ತು. ಅದನ್ನು ದೂರದಿಂದಲೇ ಕಂಡಾಗ ನನ್ನ ಬಾಲ್ಯದ ಕೆಲ ಮಧುರ ನೆನಪುಗಳಿಗೆ ರೆಕ್ಕೆ ಬಂದಂತಾಗಿ ನೆನಪಿನಂಗಳದಲ್ಲಿ ಹಾರಾಡಿ ಕಣ್ಣು ತೋಯಿಸುತ್ತಿದ್ದವು. 1998 ರ ಇಸವಿ. ಆಗ ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ. ನನಗೆ ನಂಮ ಕನ್ನಡ ಮೇಷ್ಟ್ರು ಶ್ರೀ ಜಿ.ಕೆ.ಪಾಟೀಲ್ ಅಂದ್ರೆ ಪಂಚ ಪ್ರಾಣ. ಕಾರಣ ಅವರು ಕನ್ನಡವನ್ನು ಕೇವಲ ಕಲಿಸುತ್ತಿರಲಿಲ್ಲ.. ಕನ್ನಡ ಭಾಷೆಯ ರಸಾನುಭಾವಗೈಯ್ಯುತ್ತಿದ್ದರು. ರನ್ನನ 'ಗದಾಯುದ್ಧ' ದಲ್ಲಿನ 'ಕುರುಕುಲಾರ್ಕುನುಮರ್ಕನುಮಸ್ತಮೆಯ್ದಿದರ್' ಎಂಬ ಕಾವ್ಯ ಭಾಗವನ್ನು ವಿವರಿಸುವಾಗಲಂತೂ ಅವರು ಮಗುವಿನಂತೆ ಅತ್ತಿದ್ದು, ಆ ಕಾವ್ಯದಲ್ಲಿ ಸುಯೋಧನನ ದುರಂತ ಅಂತ್ಯವನ್ನು ತಿಳಿದು ನಾವೂ ಅತ್ತಿದ್ದು ಮರೆಯಲಾಗದ್ದು. ಹೀಗೆ ಸರಾಗವಾಗಿ ಹಳಗನ್ನಡವನ್ನು ನಿರರ್ಗಳವಾಗಿ ಓದುತ್ತಿದ್ದ ಅವರ ಭಾಷಾ ಪ್ರೌಢಿಮೆಯ ಬಗ್ಗೆ ಹೇಳತೀರದು. ಹೀಗೆ ಭಾಷೆಯ ಬಗೆಗೆ ಹೇಗೆ ಪ್ರೀತಿ ಬೆಳೆಸಿಕೊಳ್ಳಬೇಕೆಂದು ಅವರಲ್ಲಿ ಕೇಳಿದಾಗ ಅವರು ಹೇಳಿದ್ದ ಮಾತು ಒಂದೇ. "ಕನ್ನಡ ಪುಸ್ತಕ...