Posts

Showing posts from November, 2015

ಪ್ರೀತಿಯ ಚಂಪಾಗೊಂದು ಪತ್ರ

ಪ್ರಿಯ ಚಂಪಾ ಅವರೇ. ನನ್ನ ಚಿಕ್ಕಪ್ಪ ಪಿಎಚ್ಡಿ ಮಾಡಿದ್ದು ನಿಂಮ ಸಂಕ್ರಮಣದ ಮೇಲೆ. 'ಸಾಹಿತ್ಯ ಪತ್ರಿಕೆಯಾಗಿ ಸಂಕ್ರಮಣ' ಎಂಬ ತಲೆಬರಹದ ಪಿಎಚ್ಡಿ ಮಹಾ ಪ್ರಬಂಧವದು. ಅದನ್ನು ಓದುತ್ತಾ ತಂಮ ವ್ಯಕ್ತಿತ್ವ ಒಂದು ಮಾದರಿಯಾಗಿ ಬೆಳೆಯಿತು. ಹಳೆಯ ಪತ್ರಿಕೆಗಳನ್ನು ಓದಿದೆ. ನಿಂಮ 'ಬಾನುಲಿ' ಎಂಬ ಕವನ ಸಂಕಲನವಂತೂ ನನ್ನ ಕವಿತೆಗಳಿಗೂ ಸ್ಭೂರ್ತಿಯಾದದ್ದು ಸುಳ್ಳಲ್ಲ. ತಾವು ನಿರಪೇಕ್ಷ, ಯಾರನ್ನೂ ನೋಯಿಸದ ಓಲೈಸದ ಸಾಹಿತಿಯೆಂದು ಹಂಚಿದೆ. ಆದರೆ ಮೊನ್ನೆ ತಾವು ನೀಡಿದ ಹೇಳಿಕೆ ಕೇಳಿ ಆಶ್ಚರ್ಯವಾಯಿತು. ದಬ್ಬಾಳಿಕೆ ವಿರುದ್ಧ ದನಿಯೆತ್ತಿ ಜೈಲಿಗೆ ಹೋಗಿಬಂದ ತಾವು, ಇಂದು ಅದೇ ವರ್ಗದ ಪ್ರಭಾವಕ್ಕೊಳಗಾಗಿಯೋ ಅಥವಾ ಇನ್ನಾವುದೋ ಕಾರಣದಿಂದ ತಪ್ಪಾದ ಹೇಳಿಕೆ ನೀಡಿದ್ದೀರಿ. ಬ್ರಾಹ್ಮಣರು ಅಂದು ಶೋಷಣೆ ಮಾಡಿದ್ದಾರೆ. ಒಪ್ಪೋಣ. ಆದರೆ ಈಗ ಅದರ ಪ್ರತೀಕಾರ ತೆಗೆದುಕೊಳ್ಳುವುದು ತಪ್ಪು. ಒಂದು ವರ್ಗವನ್ನು ಬಹಿಷ್ಕರಿಸುವ ನೈತಿಕತೆ ನಿಮಗಿದೆಯೇ? ಇಂತಹ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಕೆಡಿಸುವುದು ತರವೇ? ಬರೆಹಗಳ ಮೂಲಕ ಜನರೆದೆಯಲ್ಲಿ ಶಾಂತಿಯನ್ಧು ಬಿತ್ತಿ. ಸುಡುವ ದ್ವೇಷವನ್ನಲ್ಲ. -- ಇಂತಿ ನಿಂಮ ಸಾಹಿತ್ಯಾಭಿಮಾನಿ

ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರ -- ಪ್ರಸೆಂಟ್ ಸಾರ್ --ಡಿ.ಎಂ.ಪ್ರಶಾಂತ ಕುರ್ಕೆ

ವಿದ್ಯಾರ್ಥಿಗಳ ಹಾಜರಾತಿ ಕೊರತೆಯ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಯನ್ನು ಕಟ್ಟಿಕೊಡುವ ಕಿರುಚಿತ್ರ ಆಕರ್ಷ ಕಮಲ ನಿರ್ದೇಶನದ 'ಪ್ರಸೆಂಟ್ ಸಾರ್'. ಗಡಿನಾಡಿನ ಕನ್ನಡ ಶಾಲೆಗಳ ಪರಿಸ್ಥಿತಿ ಅವಲೋಕಿಸುತ್ತಲೇ ಈ ಭಾಗದಲ್ಲಿ ಕನ್ನಡ ಭಾಷೆಯ ದುಸ್ಥಿತಿಗೆ ಕನ್ನಡಿ ಹಿಡಿಯುತ್ತದೆ. ಗಡಿಭಾಗದಲ್ಲಿ ಕನ್ನಡ ಅರೆಜೀವವಾಗುತ್ತಿದೆ. ಈ ಭಾಗದಲ್ಲಿ ಶಾಲೆಯಲ್ಲಿ ಕಲಿತರಷ್ಟೆ ಕನ್ನಡ. ಇಲ್ಲವಾದರೆ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಭಾಷೆಯೇ ಮಾತೃಭಾಷೆಯಾಗುತ್ತದೆ. 'ಪ್ರಸೆಂಟ್ ಸಾರ್' ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ವಾಟದ ಹೊಸಹಳ್ಳಿ ಶಾಲೆಯ ಪರಿಸರದ ಕಥೆ. ಈಗಡಿನಾಡಿನ ಶಾಲೆ ಒಂದು ಪ್ರಾತಿನಿಧಿಕ ಅಷ್ಟೇ. ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಹಾಜರಾತಿ ಕೊರತೆಯಿಂದ ಶಾಲೆಗಳನ್ನು ಮುಚ್ಚುವ ಸ್ಥಿತಿಯನ್ನು ಇದು ಅಭಿವ್ಯಕ್ತಿಸುತ್ತದೆ. ಎರಡನೇ ಮಹಾಯುದ್ಧದ ವೇಳೆ ಶಾಲೆಯೊಂದರ ಮೇಲೆ ಆಗುವ ಪರಿಣಾಮ ಹಾಗೂ ಅಲ್ಲಿಯ ಒಬ್ಬ ಹುಡುಗನ ಸುತ್ತ ಫ್ರೆಂಚ್ ಲೇಖಕ ಆಲ್ಫೋನ್ಸ್ ದೋದೆ ಹೆಣೆದಿರುವ 'ಲಾಸ್ಟ್ ಲೆಸೆನ್' ಸಣ್ಣ ಕಥೆಯನ್ನು ಆಧರಿಸಿದ್ದು 'ಪ್ರಸೆಂಟ್ ಸಾರ್'. ಮೂಲಕಥೆಯನ್ನು ಕಥೆಗಾರ ಕೇಶವ ಮಳಗಿ 'ಕೊನೆಯ ಪಾಠ' ಹೆಸರಿನಲ್ಲಿ ಕನ್ನಡಕ್ಕೆ ರೂಪಾಂತರಿಸಿದ್ದರು. ಬೊಂಬೆಗಳ ಬಗ್ಗೆ ಆಸಕ್ತನಾಗಿರುವ ಸಿದ್ದು ಎನ್ನುವ ಹುಡುಗನ ಪಾತ್ರದ ಮೂಲಕ ಕಿರುಚಿತ್...

ಸುಟ್ಟರೂ ಬೆಲೆ ಕಟ್ಟಲಾಗದ ನಗು

Image
ಸುಡುವ ಬೆಂಕಿಯ ನಗು-ಗೆಳೆಯ ಸುರೇಶ್ ಎಲ್.ರಾಜಮಾನೆ ಅವರ ಚೊಚ್ಚಲ ಕವನ ಸಂಕಲನ. ರನ್ನನೂರಾದ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಈ ಕವಿ ಕಾವ್ಯ ಪ್ರೌಢಿಮೆಯಲಿ ಗಂಡುಗಲಿ. ಪ್ರಸ್ತುತ ಕವನ ಸಂಕಲನದಲಿ ಅವರ ಕವಿತೆಗಳು ಸಮಾಜ ಮುಖಿಯಾಗಿ ಜೀವ ಪಡೆದುಕೊಳ್ಳುತ್ತವೆ. ಪ್ರತಿ ಕವಿತೆಯ ಸಾಲುಗಳು ನೆನ್ನೆ ಮೊನ್ನೆ ನಂಮ ಬದುಕಿನಲಿ ಘಟಿಸಿ ಹೋದಂತೆ ತೋರುತ್ತವೆ. ಇವರ ಕವಿತೆಗಳು ಜ್ವಲಂತ ಸಮಾಜವನ್ನು ತೆರೆದಿಡುತ್ತವೆ. ಬಡತನ,ಭಗ್ನಪ್ರೇಮ,ರಾಷ್ಟ್ರಪ್ರೇಮ, ಪರಿಸರ ಕಾಳಜಿ ಹಾಗೂ ಮಾನವೀಯ ನೆಲೆಗಳು ಆಳವಾಗಿ ಬೇರೂರಿ ಕವಿತೆಗಳು ಹೃದಯಸ್ಪರ್ಶೀಯವೆನಿಸುತ್ತವೆ. ಕವಿಯ ತುಮುಲಗಳು, ಪರಿಹಾರಗಳು,ಸದ್ಯದ ಅನಿವಾರ್ಯತೆಗಳು ಕವಿತೆಯ ಮತ್ತೊಂದು ಮಗ್ಗಲನಲ್ಲಿವೆ. ಸುಡುವ ಬೆಂಕಿಯ ನಗುವಿನ ಜತೆ ಅಂತಸ್ಥ ಅಳು ಅನಾವರಣಗೊಳ್ಳುತ್ತದೆ. ಕವಿತೆಗಳು ದೀರ್ಘವೆನಿಸಿದರು ಸರಳವಾಗಿ ಓದಿಸಿಕೊಂಡು ಹೋಗುತ್ತ ಆಪ್ತವಾಗುತ್ತವೆ. ಬೆಂಕಿ ಸುಟ್ಟರೂ ಅದರ ನಗು ಇಷ್ಟವಾಗುತ್ತದೆ. -- ರನ್ನ ಕಂದ

ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯಗಳು :

ಹಿಂದೂ ಸಂಪ್ರದಾಯಗಳ ಹಿಂದಿನ ವೈಜ್ಞಾನಿಕ ಸತ್ಯಗಳು : ಭಾರತೀಯ ಸಂಸ್ಕೃತಿ ಜಗತ್ತಿನ ಎಲ್ಲ ಸಂಸ್ಕೃತಿಗಳಿಗಿಂತಲೂ ಮಿಗಿಲು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಹಿಂದೂ ಧರ್ಮದ ಕೆಲವು ಸಂಪ್ರದಾಯಗಳು ಅಕಾರಣ ನಂಬಿಕೆಗಳಂತೆ ತೋರುತ್ತವಾದರೂ ಅವು ನೈಜವಾಗಿ ಅಕಾರಣ ನಂಬಿಕೆಗಳಲ್ಲ. ಅವುಗಳಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಅಂತಹ ಕೆಲವು ಸಂಪ್ರದಾಯಗಳನ್ನು ಈ ಕೆಳಗೆ ನೋಡೋಣ. * ನಾವೇಕೆ ಕೈ ಮುಗಿಯುತ್ತೇವೆ? ನಾವು ಆಪ್ತರನ್ನು ಕಂಡಾಗ ಅಥವಾ ಹಿರಿಯರನ್ನು ಕಂಡಾಗ ಎರಡೂ ಕೈಗಳನ್ನು ಜೋಡಿಸಿ ನಮಸ್ಕರಿಸುತ್ತೇವೆ. ಇದು ಕೇವಲ ಎದುರಿದ್ದವರನ್ನು ಪ್ರಸನ್ನಗೊಳಿಸುವ ತಂತ್ರವಲ್ಲ. ಇದರ ಹಿಂದಿರುವ ವೈಜ್ಞಾನಿಕ ಸತ್ಯ ಹೀಗಿದೆ. ನಾವು ಎರಡೂ ಕೈಗಳನ್ನು ಜೋಡಿಸಿ ಕೈ ಮುಗಿಯುವಾಗ ಎರಡೂ ಕೈಗಳ ಹಸ್ತಗಳು ಒಂದುಗೂಡುತ್ತವೆ. ಎರಡೂ ಕೈಗಳ ಬೆರಳ ತುದಿಗಳು ಒತ್ತಲ್ಪಡುತ್ತವೆ. ಈ ಹತ್ತೂ ಬೆರಳ ತುದಿಗಳಲ್ಲಿ ಒತ್ತಡ ಬಿಂದುಗಳಿವೆ. ನಮಸ್ಕರಿಸುವಾಗ ಇವು ಒತ್ತಲ್ಪಡುವುದರಿಂದ ಕಣ್ಣು, ಕವಿ ಹಾಗೂ ಮನಸ್ಸು ಸಕ್ರಿಯವಾಗುತ್ತವೆ. ಇದರಿಂದ ನಾವು ನಮಸ್ಕರಿಸುವ ವ್ಯಕ್ತಿಯ ಚಿತ್ರ ನಮ್ಮ ಮನಃಪಟಲದಲ್ಲಿ ಮೂಡಿ ಅವರು ನಮ್ಮ ನೆನಪಿನಲ್ಲಿ ಉಳಿಯುತ್ತಾರಂತೆ. * ಕಾಲುಂಗುರ ಏಕೆ? ಮುದುವೆಯಲ್ಲಿ ವಧುವಿನ ಕಾಲಿಗೆ ಬೆಳ್ಳಿ ಕಾಲುಂಗುರ ತೊಡಿಸುತ್ತಾರೆ. ಬೆಳ್ಳಿ ಕಾಲುಂಗುರ ಹೆಣ್ಣು ಮಕ್ಕಳಿಗೇ ಏಕೆ? ಅದು ಎ...

ಹಳೆಯ ಪ್ರೇಮ ಪತ್ರವೇ,

ಹಳೆಯ ಪ್ರೇಮ ಪತ್ರಗಳನ್ನು ಜೋಪಾನವಾಗಿಟ್ಟಿದ್ದೇನೆ. ಆಗಾಗ ನಾನು ಹಾಗೂ ನನ್ನ ಪ್ರೇಯಸಿ(ಈಗ ಹೆಂಡತಿ ಎಂಬ ಹೆಚ್ಚುವರಿ ಹುದ್ದೆಯಲ್ಲಿದ್ದಾಳೆ) ಸೇರಿ ಓದುತ್ತ ಹಳೆಯ ನೆನಪುಗಳನ್ನ ಮೆಲುಕು ಹಾಕುತ್ತಿರುತ್ತೇವೆ. ಅದರಂತೆ ಆಗ ಹಾಗಿದ್ದು ಈಗ ಬದಲಾದ ನನಗೆ ಈಕೆ ಬಯ್ಯುತ್ತಿರುತ್ತಾಳೆ. ಆಗ ನಾವಿದ್ದ ರೀತಿ, ಒಬ್ಬರಿಗೊಬ್ಬರು ಸಂತೈಸುತ್ತಿದ್ದ ರೀತಿ,ಪ್ರೀತಿಯ ತೀಕ್ಷ್ಣತೆ ಎಲ್ಲವನ್ನೂ ಈಗಿನ ಬದಲಾವಣೆಯೊಂದಿಗೆ ಮೌಲ್ಯಮಾಪನ ಮಾಡುತ್ತೇವೆ. ಆಕೆ ಆಗ ನನ್ನಿಂದ ದೂರವಿದ್ದಾಗ ತಾನು ವಿರಹ, ನಾನು ಅವಳಿಲ್ಲದೇ ಪಟ್ಟ ಒಂಟಿತನ ಮುಂತಾದವುಗಳು ನಂಮ ಈಗಿನಪ್ರೀತಿಯನ್ನ ಇನ್ನಷ್ಟು ಗಟ್ಟಿಗೊಳಿಸುತ್ತವೆ. ಆದ್ದರಿಂದ ನೀವು ಆಗಾಗ ಪ್ರೇಮ ಪತ್ರಗಳನ್ನು ಓದಲು ಶುರುಮಾಡಿ. ಬೇರೆ ಹುಡುಗಿ ಬರೆದ ಪತ್ರ ಓದೀರಾ ಜೋಕೆ!

ಹಾಯ್ಕುಗಳು

1 ಇರುಳ ಸೆರಗಲ್ಲಿ ತಾರೆಗಳು ಎದೆಯ ಗೂಡಲ್ಲಿ ಸುಡುವ ಕೆಂಡಗಳ ರೀತಿ 2 ಉಳ್ಳವರು ಇಲ್ಲದವರ ಆಳುತಿಹರು ಕೂಡಲ ಸಂಗಮ ದೇವ ಎಲ್ಲಿ ಬಸವಣ್ಣ? 3 ತೀರಕ್ಕೆ ಮುತ್ತಿಡುವ ತೊರೆ ಹೊದ್ದ ಬೇಗುದಿಯೆಷ್ಟೋ? ಸಾಗರದ ಎದೆಯೊಳಗೆ 4 ಅವಳ ಕಮಲದಂತ ನಯನದ್ವಯಗಳಿಗೆ ನನ್ನ ಮನದುಂಬಿ ಬಿಡದೇ ಎಡತಾಕಿದೆ ಜೀವನ ಮಧುಪಾನಕ್ಕಾಗಿ --- ರನ್ನ ಕಂದ

ಹಾಲಾ ಸಕ್ರಿ

ಅಕಿ ನಕ್ರ ಎದ್ಯಾಗ ಪ್ರೀತಿ ಹಳ್ಳ ಹರಿತೈತಿ ಎದ್ರಿಗ್ ಸಿಕ್ರ ಖುಷೀಲೆ ಖುಷಿ ಕೊಳ್ಳ ಹರಿತೈತಿ ಹೆಂಗ್ ವರ್ಣನಾ ಮಾಡ್ಲಿ ಅಕಿನ ಏನs ಹೇಳ್ರಿ ಅಕಿನ ನೋಡೂದಂದ್ರ ಹಸsದ ಹೊಟ್ಟ್ಯಾಗ ಹಾಲಾ ಸಕ್ರಿ ಸುರದ್ಹಂಗಾಕ್ಕೈತಿ --- ರನ್ನ ಕಂದ

ಗಜಲ್ :

ಭಾವಗಳು ಕಡೆದ ಮನಸಿನ ನವನೀತ ಕರಗಬಹುದು ನಿನ್ನ ನೆದರಿನ ಕಾವು ವಿಪರೀತ ತುಟಿಗೆ ಅಂಟಿದ ನಗೆಯ ಮಾತಿನ ಪ್ರವರ ಮೌನಕೆ ನಾನೀಗ ತೆರುವ ಬೆಲೆ ನಿಖರ ಕನಸುಗಳ ಬುತ್ತಿಯೊಳಗೆ ರುಚಿಗಿಷ್ಟು ಹುಡುಕಾಟ ನನಸಾಗದೇ ಉಳಿದ ನೆನಪುಗಳ ತಡಕಾಟ ಎದೆಯ ಚಂದಿರನಿಗೆ ದಿನವೂ ಹುಣ್ಣಿಮೆಯಾಗುವಾಸೆ ಮನಸು ಮನಸುಗಳು ನಡುವೇ ನೋಟವೇ ಹಿತವಾದ ಭಾಷೆ ಬಾಳ ಪಯಣದ ಕೊನೆಗೆ ಸಿಕ್ಕ ಉತ್ತರಗಳು ಅಸ್ಪಷ್ಟ ತಿದ್ದಬಹುದಾದ ತಪ್ಪುಗಳು ಈಗೀಗ ನಿಕೃಷ್ಟ --- ರನ್ನ ಕಂದ

ಹೆಂಡತಿ ತವರಿಗೆ ಹೊರಡುವೆನೆಂದರೆ...

"ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಹುಣ್ಣಿಮೆ ಹೋಳಿಗೆ ದೀಪ ಹೆಂಡತಿ ತವರಿಗೆ ಹೊರಡುವೆನೆಂದರೆ ನನಗಿನ್ನಿಲ್ಲದ ಕೋಪ" -- ಕೆ ಎಸ್ ನ ನಿಜ ರೀ, ಹೆಂಡತಿ ತವರಿಗೆ ಹೋದರೆ ಬಾಳು ಬರೀ ಅಮವಾಸ್ಯೆ,ಅದೇ ಚಿತ್ರಾನ್ನ,ಕತ್ತಲು ಮತ್ತು ಕೋಪ(ಕೇವಲ ಹೆಂಡತಿಯನ್ನು ಮಾತ್ರ ಸಿನ್ಸಿಯರ್ ಆಗಿ ಪ್ರೀತಿಸುವವರಿಗೆ). ಆಫೀಸಿಂದ ಮನೆಗೆ ಬಂದ ತಕ್ಷಣ ಆಕೆ ಕೊಡೋ ಕಾಫಿ ದಿನದ ಎಲ್ಲ ಆಯಾಸವನ್ನ ಕಡಮೆ ಮಾಡುತ್ತದೆ. ಅದೇ ನಾನೇ ಮಾಡಿಕೊಂಡ ಟೀ ಕಾಫೀ ಕಲಗಚ್ಚು ಇದ್ದಂಗಿರುತ್ತದೆ. ಬೆಳಿಗ್ಗೆ ಸಿಹಿ ಮುತ್ತು ನೀಡಿ ಅಲಾರಾಂನಂತೆ ಎಬ್ಬಿಸಿ,ಸ್ನಾನಕ್ಕೆ ನೀರಿಟ್ಟು ನಂ ಬಟ್ಟೆಗಳನ್ನ ಇಟ್ಟು ನಮ್ಗೆ ಟಿಫಿನ್ ರೆಡಿ ಮಾಡ್ತಾಳೆ. ನಗುನಗುತಾ ಬೀಳ್ಕೊಡ್ತಾಳೆ. ಮನೇನಾ ಅಂದವಾಗಿ ಇಟ್ಕೊಳ್ಳೋದು ಹೆಂಡತಿಗೆ ಸುಲಭವಾಗಿ ಒಲಿದ ಕಲೆ.ಅದೇ ನಾನೊಬ್ನೆ ಇದ್ದಾಗ ಎಲ್ಲಿ ಏನ್ ಬಿದ್ದಿರುತ್ತೋ ಅದ್ ಅಲ್ಲೇ ಇರುತ್ವೆ. ನೀಟಾಗಿ ಬಟ್ಟೆ ಒಗೆದು ಇಸ್ತ್ರಿ ಮಾಡೋ ಹೆಂಡ್ತಿ ಊರಿಗೆ ಹೋದಾಗ ನಾವ್ ಬಟ್ಟೆ ತೊಳೆಯೋ ಪಾಡು ಹೇಳತೀರದು. ಸ್ವಚ್ಛವೇನೋ ಆಗ್ತವೆ ಆದ್ರೆ ಹೆಂಡ್ತಿ ಒಗೆದಂಗಾಗಲ್ಲ. ಅಡುಗೆ ಬರದ ನನ್ನಂಥವರ ಪಾಡು ಬೇಡವೇ ಬೇಡ. ಉಪ್ಪೋ ಹುಳಿಯೋ ಖಾರಾನೋ ಹೆಚ್ಛಾಗಿ ನಾನೇ ತಿನ್ನದಷ್ಟು ಕೆಟ್ಟದಾಗಿರುತ್ತೆ ಅಡುಗೆ. ಪ್ರತಿ ಕ್ಷಣವೂ ಹೆಂಡ್ತಿ ಬೇಕು ಹೆಂಡ್ತಿ ಎನಿಸುತ್ತೆ. ತವರಿಗೆ ಹೋದಾಗ ಖುಷಿ ಪಡೋ ಗಂಡಸರೂ ಇದ್ದಾರೆ ಅದ್ಬಿಡಿ. ಆದರೆ ನಮಗಾಗೇ ಬದುಕೋ ಮುದ್ದು ಜೀವ ಅದು. ...

ಪ್ರಶಸ್ತಿ ವಾಪಸಾತಿ ಮತ್ತು ಸಹಿಷ್ಣುತೆ

ಪ್ರಶಸ್ತಿ ವ್ಯಕ್ತಿತ್ವಕ್ಕೆ ದೊರೆತಿರುವಂತಹದ್ದು. ಅದನ್ನು ವಾಪಸು ಪಡೆದರೆ ಅಥವಾ ವಾಪಸಾತಿ ಮಾಡಿದರೆ ಅಂತಹ ವ್ಯಕ್ತಿತ್ವ ನಂಮದಲ್ಲ ಎಂದು ಒಪ್ಪಿಕೊಂಡಂತಾಗುತ್ತದೆ. ಸಾಹಿತಿಗಳು ಪ್ರಶಸ್ತಿ ವಾಪಸಾತಿಯನ್ನು ಪ್ರತಿಭಟನೆಯ ವಿಧ ಎಂದು ತಿಳಿದು ವಾಪಸಾತಿ ಮಾಡುತ್ತಿರುವುದು ಒಂದು ಬಗೆಯ ಸಮೂಹ ಸನ್ನಿ. ಯಾವುದೇ ಸರ್ಕಾರ ಏಕ ವ್ಯಕ್ತಿಯಲ್ಲ. ಎಲ್ಲವೂ ಸರ್ಕಾರದಿಂದಲೇ ಸಂಭವಿಸುವುದಿಲ್ಲ. ನಂಮದೇ ಸರ್ಕಾರ ಇದೆ ಎಂದು ಯಾರೂ ದುಷ್ಕೃತ್ಯ ಎಸಗುವುದಿಲ್ಲ. ಅದು ವ್ಯಕ್ತಿನಿಷ್ಠವೇ ಹೊರತು ಸರ್ಕಾರ ಪ್ರೇರಿತವಲ್ಲ. ಪ್ರಶಸ್ತಿಗಳನ್ನು ವಾಪಸು ಮಾಡಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬುದು ತಪ್ಪು. ಸಾಹಿತಿಗಳಲ್ಲಿ ಸಾಕಷ್ಟು ವಿಚಾರಗಳಿವೆ. ಬರೆಹಗಳ ಮೂಲಕ ಜನರಲ್ಲಿ ಸಾಮರಸ್ಯ ಬಿತ್ತುವಂತ ಕೆಲಸ ಆಗಬೇಕೇ ಹೊರತು ಸುದ್ದಿಯಾಗುವುದರಿಂದ ಸಹಿಷ್ಣುತೆ ಸಾಧ್ಯವಿಲ್ಲ. --- ಸಚಿನ್ ಕುಮಾರ ಬಿ. ಹಿರೇಮಠ,ರನ್ನ ಮುಧೋಳ

ನನ್ನ ಕವಿತೆ

ನನ್ನ ಕವಿತೆ ಸಮಾಜ ಮುಖಿ ಎಲ್ಲ ಸ್ತರಗಳಲ್ಲೂ ಪರಮ ಸುಖಿ ನನ್ನ ಕವಿತೆಯ ಆಯಾಮಗಳು ಹಲವು ನೋವು, ನಲಿವು, ಒಲವು ಗೆಲುವು ಹೀಗೆ.ಸಾಗುತ್ತದೆ ನನ್ನ ಕವಿತೆ.. ಹಸಿದ ಉದರದ ಬೆಂದ ಬಿಸಿ ಅಸ್ಪೃಶ್ಯರೆಂಬ ಹಣೆಪಟ್ಟಿಯ ಕರಾರು ಅಲ್ಪರೆಂಬ ಏಕಾಕಿ ಭಾವದೊಳಗಿನ ಹುನ್ನಾರ ಜನಿವಾರ, ವಿಭೂತಿ ಜುಟ್ಟು ನಮಾಜು ಎಂಬ ವಿಧಿ ವಿಧಾನಗಳ ಅಡಿಯಲ್ಲಿ ಸಿಕ್ಕ ಧರ್ಮ ಎಲ್ಲ. ಮರ್ಮಗಳ ಕರ್ಮ ಸಿದ್ಧಾಂತ ನನ್ನ ಕವಿತೆ.. ಲಂಚಾವತಾರಗಳ ಪ್ರಭಾವಳಿಯಲ್ಲಿ ಬದುಕುವ ಉಪಾಯ ದುರಿತ ಕಾರ್ಯಕೆ ಅರಿತವರಿಂದಲೇ ಮಸ್ತಾಭಿಷೇಕ ಶರಣ-ಶರಣೆಯರ ಲಿಂಗಾಂಗ ಷಟ್ ಸ್ಥಲ ಸೋಪಾನ ವಚನ ಗದ್ಯ ಪದ್ಯಗಳಲಿ ಅತ್ಯಂತ ಜೋಪಾನ ಮಾತಿನ ಲಯಕ್ಕೆ ಸಿಗದ ನಡೆವಳಿ ನಡೆವಳಿ ಇಲ್ಲದೇ ಬರಿಮಾತಿನ ಬಳುವಳಿ ಎಲ್ಲದರ ಸಮ ಸಮನಾದ ಸಮಷ್ಠಿ ಔಈತಿಯಿಂದಾವರಿಸಿರುವ ಮನಗಳಲಿ ಕಾಣುವುದೇ ಪ್ರೀತಿ? ಮೇಲೆ ತುಂಬಿರುವ ಮನಸುಗಳು ಇರುಳ ತಾರೆಗಳ ರೀತಿ ಇರುಳ ಸೆರಗಿನಲಿ ಕೋಟಿ ರಂಧ್ರಗಳಂತೆ ತಾರೆ ಮಿನುಗುತ್ತಲೇ ಮಾಯವಾಗುತಿದೆ ಪ್ರೀತಿ ಸಂತೃಪ್ತಿಯೆಂಬುದು ಕತ್ತಲೆಯಲಿ ಹುಡುಕುವ ಕರಿಮಣಿಯ ಮಾಲೆಯಂತೆ ತೋರಿದರೂ ಹುಡುಕಲೆತ್ನಿಸುತಿದೆ ನನ್ನ ಕವಿತೆ ಬದುಕೆಂಬ ಭಾರಿ ಜೂಜಾಟದಲಿ ಗೆದ್ದವರು ವಿರಳ ಗೆಲುವಲ್ಲೇ ಬೆರೆತಿವೆ ಸೋಲುಗಳ ಹೆರಳ ನಾನು ನೀನು ಆನು ತಾನು ಭಾಗ್ಯವಾಗುತಿದೆ ಒಳಗಣ್ಣ ತೆರಸಿ ಒಳದನಿಯ ನುಡಿಸಿ ಹಾಡಲೆತ್ನಿಸುತಿದೆ ಈ ನನ್ನ ಕವಿತೆ.. --- ಸಚಿನ್ ಕುಮಾರ ಬಿ.ಹಿರೇಮತಠ

ಬೆಳಕು

ಬೆಳಕನೂಡುವ ಹಣತೆ ತಮವ ತಿರಿಯಿತು ತನ್ನ ಕೆಳಗೊಂಡಿಷ್ಟು ಬಿಟ್ಟಿತೇಕೋ ನಾನರಿಯೆ ಕತ್ತಲೆಂದರೇ ಬೆಳಕಿಗೆ ಹಿರಿ ಹಿರಿ ಹಿಗ್ಗು ನುಗ್ಗಿ ಎಲ್ಲ ನುಂಗಿ ಹಾಕಬಹುದಲ್ಲ! ಕತ್ತಲೆಗೂ ಅಷ್ಟೇ ಬೆಳಕಿನಲ್ಲಡಗಿ ಹೋಗುವ ತವಕ ಹ್ಯಾಗೋ ಒಂದು ರೀತಿ ಆದರೆ ಸಾಕು ಪುನೀತ ಬೆಳಕೆಂದರೆ ಬೆಂಕಿ ಶಾಖ ಎನ್ನುವುದು ವಿಜ್ಞಾನ ಒಳಿತು ಅರಿವು ಎನ್ನುತ್ತದೆ ಬರೀ ಜ್ಝಾನ ಬೆಳಕೆಂದರೆ ಎದೆಯ ನಗು ಕಣ್ಣ ಹೊಳಪು, ಆತ್ಮಜ್ಞಾನ ಎಂದಷ್ಟೇ ನನ್ನ ಮಾತು -- ರನ್ನ ಕಂದ

ನಿರೀಕ್ಷೆ

ನಗುವೊಂದು ನಿಂತಿದೆ ತುಟಿಯ ಅಂಚಲ್ಲೆ ಎದೆಯ ದುಗುಡವ ತಡವಿಕೊಂಡು ಮಂದಹಾಸವಾಗಿ ನಡೆದಷ್ಟು ಕಲ್ಲುಮುಳ್ಳಿನ ಹಾದಿ ಬದಿಗೆಲ್ಲ ನೋಡಿ ನಗುವವರದೇ ಬೀದಿ ಕಾರುಣ್ಯ ರಸ ಹಳಸಿದೆ ಎಲ್ಲರಲಿ ಕಲ್ಲರಳುವ ಸಮಯವಿಲ್ಲ ಇಲ್ಲಿ ಅಗುಳ ಕಂಡರೇ ಕರೆವ ಕಾಗೆಯಂತಿಲ್ಲ ಮನುಜ ಕಂಡರೂ ಕಾಣದಂತಿದ್ದರೆ ಎಲ್ಲವೂ ಸಹಜ ಮನ-ಮನದ ನಡುವಿನ ಸೋಪಾನ ಸಡಿಲ ಬದುಕು ಬಾಳುವುದಿಲ್ಲಿ ಇನ್ನೂ ಜಟಿಲ ನಗು ತಾ ಹುಟ್ಟಬೇಕಿದೆ ದಿನವೂ ಮನದ ಕದ ತಟ್ಟಬೇಕಿದೆ ನಗುವು ಮನಕೆ ಮನದ ಮುದವಾಗಲೇಬೇಕು ಆಗ ಮಾತ್ರ ಹಸನು ನಂಮ ಬದುಕು -- ರನ್ನ ಕಂದ