Posts

Showing posts from November, 2017

ಸುತ್ತ ಸುಳಿವವಳೇ...

ಚಿತ್ತ  ಚಂಚಲವಾಗದಂತೆ ಸುತ್ತ ಸುಳಿದವಳೇ ಮತ್ತೇನು ಕುಶಲೋಪರಿ ಎಂದು ಮುತ್ತನೀವವಳೇ ಅಂತರಂಗದ ಅಂತಃಪುರದಲಿ ಅಂತರಾಂತರ ಎಣಿಸುವವಳೇ ಇಂತು ರಾಗದಿ ಕುಂತು ಮುದದಲಿ ಅಂತರ್ಧಾನವಾಗುವವಳೇ ಮಬ್ಬಿನಲೆ ತಬ್ಬುತಿಹ ಎಳೆ ಶಶಿಯಾಗಸವ ಉಬ್ಬುತಲಿ ಹಬ್ಬವದು ಸಖಿ ಸಖನೆದೆಯಾಗಸವ -- ರನ್ನ ಕಂದ

ಹೂಗಳು

ಯಾವುದೋ ದಾರಿಯ ಬೇಲಿಯ ಹೂಗಳು ನಗುತ್ತವೆ ಪರಿಮಳದ ಅಹಮ್ಮಿನಲಿ ಸುಂದರತೆಯ ಬಿಮ್ಮಿನಲಿ ಸದಾ ಖುಷಿಯ ಧೇನಿಸುತ್ತವೆ ಒಂದೊಂದು ಹೂವಿಗೆ  ಒಂದು ಚೆಂದವಿದೆ ಸೌಗಂಧವಿದೆ ಒಂದೊಂದು ದೇವರ ಮುಡಿಗೆ ಬೇಷರತ್ ಮೀಸಲಿವೆ ನಮ್ಮಂತೆ ಬದುಕು ಹಸನು ಈ ಹೂಗಳದ್ದು ಮುಡಿಯೇರಿ ನಗುತ್ತವೆ  ಮಾಲೆಯ ಸೇರಿ ಹಲವು ಹೂಗುಚ್ಛದಲಿ ಅವಿತು ಕೆಲವು ಒಂದೊಂದು ಜಾಗೆಗೆ  ಒಂದೊಂದು ಅರ್ಥ ನೀಡುತ್ತವೆ ಈ ಹೂಗಳು ಅಂತೆಯೇ ನಮ್ಮ ಮನದ ಹೂಗಳು ಸದಾ ಅರಳಬೇಕು ಒಲವ ಸೌಗಂಧ ಸೂಸುತ ಮುಡಿಯೇರಬೇಕು ಮುಳ್ಳುಗಳ ನಡುವೆ ಮೃದುತನವ ತೋರಬೇಕು ಈ ಹೂಗಳಂತೆ.. --- ರನ್ನ ಕಂದ

ಹನಿಗವಿತೆಗಳು

ಹೂ ಮಾತು ತುಂಬಿಗಳ ತುಟಿಗೊಂದಿಷ್ಟು ಸವಿಯ ತೋರಿ ಗಾಳಿಗೊಂದಿಷ್ಟು ಗಂಧ ಸವರಿ ಹೂ ತಾ ನಗುತಲಿದೆ ಎಷ್ಟೋ ಮನಸುಗಳಿಗೆ ಚಂದ ತೋರಿ ಅದೆಷ್ಟೋ ಕಾವ್ಯಗಳ ಛಂದ ಮೀರಿ ಮಾತಾಡುತಿದೆ ಮೌನದೊಳಗೆ --- ರನ್ನ ಕಂದ ಬೆಸುಗೆ ಬಲ್ಲಿದರ ಮುಗಿಲ ನೆಕ್ಕುವ  ಇಮಾರತಿನ ಬಿಡಿಭಾಗಗಳೆಲ್ಲ ಬಡವರ ಶ್ರಮದ ಬೆವರಿನ ಬಂಧಗಳ ಬೆಸುಗೆ --- ರನ್ನ ಕಂದ

ಹಳದಿ ಗಾಜಿನ ಕನ್ನಡಕ

ಎಲ್ಲವೂ ಹಿಮ್ಮುಖ ಅಪ್ರಬುದ್ಧ ಮನಸುಗಳು ಹಳದಿ ಕಣ್ಣಲಿ ಜಗವ ಹುಡುಕಿ  ಜಗಕೆಲ್ಲ ಕಾಮಾಲೆ ಎಂದು ಪದ್ಯ ಬರೆವರು ಇತ್ತುದನ್ನು ಒತ್ತು ಕೊಡದೇ ಅರ್ಥ ಮಾಡಿಕೊಳ್ಳದೇ ಅರಿತುಕೊಳ್ಳದೇ ಗಡ್ಡ ಕೆದರಿ ಪದ್ಯ ಬರೆವರು ಯಾಕೆ ಏನು ಎಂಬುದನು ಇಂಬುಗೊಳದೇ ಜಂಭವನೆ ನಂಬಿಕೊಂಡ ಹುಂಬಿನಲಿ ಪದ್ಯ ಬರೆವರು ಕಸ್ತೂರಿಯನರಿದ  ಬಿತ್ತರದ ಮನವಿರದೆ ಒತ್ತರದಲಿ ನಾಲ್ಕೈದು ಸಾಲು ಗೀಚಿ ಎತ್ತರೆತ್ತರದಿ ಸರಿವ ಸುಳ್ಳು ಸುಖದಿ ಪದ್ಯ ಬರೆವರು.. -- ರನ್ನ ಕಂದ

ಹಸು,ಹುಲಿ ಮತ್ತು ಸತ್ಯ

ಖಡ್ಗದ ಮೇಲಿನ ರಕ್ತ ದ ಕಲೆ ಕೇವಲ ಒಣಗಿ ಹೋದ ಸೇಡಲ್ಲ. ಹುರಿ ಮೀಸೆಯ ಎಲ್ಲ ತಿರುವು ಶೂರತನದ ಕುರುಹಲ್ಲ.. ಹುಲಿಯ ಸಾವಿಗೂ ಮುನ್ನ ಗೋವು ಸಾಯಬಯಸಿತ್ತು.. ಹುಲಿಯ ಹಸಿವ ನೀಗಲು ಕರುಳ ಹರಿದಿತ್ತು.. ಸತ್ಯ ನಂಬುಗೆಯ  ಹುಲಿಗೆ ಕಲಿಸಿತ್ತು.. ಆ ಹುಲಿ ಕಲಿತುಕೊಂಡರೂ ಉಳಿದ ಹುಲಿಗಳಿಗೆ  ಅರ್ಥವಾಗಲಿಲ್ಲ.. ಕತೆಗೂ ಮೊದಲು ಸತ್ತ ಹಸುಗಳೆಷ್ಟೋ..? ಕೊಂದ ಹುಲಿಗಳೆಷ್ಟೋ ತಿಂದ ದಿನಗಳೆಷ್ಟೋ.. ಸುಮ್ಮನೇ ಕತೆಯಾಗುವುದಿಲ್ಲ ಬರೆದುದೆಲ್ಲ ಕವಿತೆಯಾಗುವುದಿಲ್ಲ.. ಎಲ್ಲ ಗೋಡೆಗಳಿಗೂ ಬೆರಣಿ ತಟ್ಡಿದರೆ ಅಂದ ತೋರುವುದಿಲ್ಲ. --- ರನ್ನ ಕಂದ

ನವ ಕರ್ನಾಟಕ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳ....

ನಾನು ಪ್ರತಿ ಸಲ ವಿಜಯಪುರಕ್ಕೆ ಹೋದಾಗ ಗಾಂಧೀ ವೃತ್ತದ ಮುಂದಿನ ರಸ್ತೆಯಲ್ಲಿನ ನಗರ ಸಭೆ ಕಟ್ಟಡದ ಪಕ್ಕದಲ್ಲಿ ತಪ್ಪದೇ ಕಣ್ಣು ಹಾಯಿಸುತ್ತೇನೆ. ಅಲ್ಲಿ ಈಗ ಮಾಸ್ಟರ್ ಪ್ಲ್ಯಾನ್ ಬಂದು  ಎಲ್ಲ ಬದಲಾಗಿದೆ. ಮೊದಲು ಅಲ್ಲಿ 'ನವಕರ್ನಾಟಕ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮೇಳ'  ಎಂಬ ಖಾಯಂ ಶೆಡ್ಡೊಂದು ಸದಾ ಕಾಣ ಸಿಗುತ್ತಿತ್ತು. ಅದನ್ನು ದೂರದಿಂದಲೇ ಕಂಡಾಗ ನನ್ನ ಬಾಲ್ಯದ ಕೆಲ ಮಧುರ ನೆನಪುಗಳಿಗೆ ರೆಕ್ಕೆ ಬಂದಂತಾಗಿ ನೆನಪಿನಂಗಳದಲ್ಲಿ ಹಾರಾಡಿ ಕಣ್ಣು ತೋಯಿಸುತ್ತಿದ್ದವು.       1998 ರ ಇಸವಿ. ಆಗ ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ. ನನಗೆ ನಂಮ ಕನ್ನಡ ಮೇಷ್ಟ್ರು ಶ್ರೀ ಜಿ.ಕೆ.ಪಾಟೀಲ್ ಅಂದ್ರೆ ಪಂಚ ಪ್ರಾಣ. ಕಾರಣ ಅವರು ಕನ್ನಡವನ್ನು ಕೇವಲ ಕಲಿಸುತ್ತಿರಲಿಲ್ಲ.. ಕನ್ನಡ ಭಾಷೆಯ ರಸಾನುಭಾವಗೈಯ್ಯುತ್ತಿದ್ದರು. ರನ್ನನ 'ಗದಾಯುದ್ಧ' ದಲ್ಲಿನ 'ಕುರುಕುಲಾರ್ಕುನುಮರ್ಕನುಮಸ್ತಮೆಯ್ದಿದರ್' ಎಂಬ ಕಾವ್ಯ ಭಾಗವನ್ನು ವಿವರಿಸುವಾಗಲಂತೂ ಅವರು ಮಗುವಿನಂತೆ ಅತ್ತಿದ್ದು, ಆ ಕಾವ್ಯದಲ್ಲಿ ಸುಯೋಧನನ ದುರಂತ ಅಂತ್ಯವನ್ನು ತಿಳಿದು ನಾವೂ ಅತ್ತಿದ್ದು ಮರೆಯಲಾಗದ್ದು. ಹೀಗೆ ಸರಾಗವಾಗಿ ಹಳಗನ್ನಡವನ್ನು ನಿರರ್ಗಳವಾಗಿ ಓದುತ್ತಿದ್ದ ಅವರ ಭಾಷಾ ಪ್ರೌಢಿಮೆಯ ಬಗ್ಗೆ ಹೇಳತೀರದು. ಹೀಗೆ ಭಾಷೆಯ ಬಗೆಗೆ ಹೇಗೆ  ಪ್ರೀತಿ ಬೆಳೆಸಿಕೊಳ್ಳಬೇಕೆಂದು  ಅವರಲ್ಲಿ ಕೇಳಿದಾಗ ಻ವರು ಹೇಳಿದ್ದ ಮಾತು ಒಂದೇ. "ಕನ್ನಡ ಪುಸ್ತಕಗಳನ್ನು ಕೊ...

ನೀ ಸತಿಯೋ.. ರತಿಯೋ...? ದುಷ್ಟ ಸಂಹಾರಿ

ನಿಮ್ಮ ಈ ನರ್ತನ ಯಾವುದರ ಅಪವರ್ತನ? ಯಾವುದೇ ಭಂಗಿಗಳೂ ಸದ್ಯಕ್ಕೆ ತಾರವು ಯಾವುದೇ ಪರಿವರ್ತನ… ನೀ ಸತಿಯೋ ರತಿಯೋ ಅರಿತರೇನೊಂದು ತರವಲ್ಲ.. ಆ ಶಿವನ ಈ ಮದನ ಕೆದಕಿದಂತೆ ಇದು ಸಲ್ಲ… ನಿನ್ನ ಲಲಾಟದ ಮೇಲಿನ ಕೆಂಪು ನಿನ್ನ ರೌರವದ ಗುರುತೇ? ಯಾವ ಔಚಿತ್ಯಕ್ಕೆ ಈ ನಿನ್ನ ಸಿಟ್ಟು? ಇರಬಹುದೇ ನಿಮ್ಮೊಳಗೊಂದು ಗುಟ್ಟು? ನಿನ್ನ ಬೆನ್ನ ಮೇಲೆ ಅವಳ ಒಂಟಿಗಾಲಿನ ಭಂಗಿ ನಿಂತಂತೆ ನಾರಿದೈವವೊಂದು ಪುರುಷ ಪಿಶಾಚಿಯನ್ನು ನುಂಗಿ.. ಶತಮಾನಗಳಿಂದ ತುಳಿದ ಪುರುಷನ ಪೌರುಷವ ಹೇಷಾವರದಿ ಕುಕ್ಕಿ ಹತ್ತಿಕ್ಕಿ.. ಮಹಾಪರ್ವವ ಆರಾಧಿಸುತ ನಿಂತ ನಾರಿ ತಾಂಡವದಿ ದುಷ್ಟ ಸಂಹಾರಿ.. ಸದಾ ಚೇತೋಹಾರಿ…