ಮುಗಿಯುತು ಸಿಂಹ ಗರ್ಜನೆ.........!
ಮುಂಜಾನೆ ಎಷ್ಟು ಕ್ರೂರವಾಗಿರುತ್ತವೆ ಎಂಬುದಕ್ಕೆ ಇಂದಿನ ದಿನವಾದ 30-12-2009 ಸಜೀವ ಸಾಕ್ಷಿ. ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಕರ್ನಾಟಕವೇ ಕಂಬನಿ ಮಿಡಿಯುವ ಅತ್ಯಂತ ಕರಾಳವಾದ ದಿನ. ಸಾಹಸಸಿಂಹ ಡಾ.ವಿಷ್ಣುವರ್ಧನ ನಮ್ಮಿಂದ ದೂರಾದ ಕೆಟ್ಟ ಘಳಿಗೆ. ಬೆಳಗಿನ ಜಾವವೇ ಸುದ್ದಿವಾಹಿನಿಗಳು ಸುದ್ದಿ ಬಿತ್ತರಿಸಿದವಾದರೂ ಕನ್ನಡಿಗರ್ಯಾರೂ ಆ ಸುದ್ದಿಗಳನ್ನ ತಮ್ಮ ಮಟ್ಟಿಗೆ ನಂಬದೇ ಹೋಗಿದ್ದರು. ಏಕೆಂದರೆ ನಿನ್ನೆಯಷ್ಡೇ ಗಾನ ಚೆತನ ಸಿ.ಅಶ್ವಥ್ ಗಾನಲೀನವಾಗಿದ್ದರು. ಕನ್ನಡಾಂಬೆ ಇಂಥ ಅನ್ಯಾಯವನ್ನು ತನ್ನ ಮಕ್ಕಳೊಂದಿಗೆ ಮಾಡಲಾರಳು ಎಂಬುದನ್ನು ನಂಬಲು ಸಾಧ್ಯವಿರಲಿಲ್ಲ. ಆದರೆ ಸತ್ಯ ಮಾತ್ರ ಕಹಿ..ನಿಜ..ಡಾ.ವಿಷ್ಣು ನಮ್ಮೊಡನೆ ಇನ್ನಿಲ್ಲ...
ಪ್ರೀತಿ ತುಂಬಿದ ಕಣ್ಣುಗಳು. ಕಂಚಿನ ಕಂಟದ ಮುದ್ದು ಧ್ವನಿ, ಆ ವಿಭಿನ್ನ ಶೈಲಿ, ಸರಳ ವ್ಯಕ್ತಿತ್ವ, ಸಹಾಯ ಮನೋಭಾವ ಇಲ್ಲವನ್ನೂ ದೇವರಂತೆ ಮೈಗೂಡಿಸಿಕೊಂಡಿದ್ದ ಡಾ.ವಿಷ್ಣು ಕನ್ನಡಿಗರ ಹೃದಯದಲ್ಲಿ ಆರಾಧ್ಯ ದೈವರಂತೆ ಎದ್ದು ನಿಲ್ಲುತ್ತಾರೆ.ಸದಾ ಕನ್ನಡತನವನ್ನ, ಪಾತ್ರ ತನ್ಮಯತೆಯನ್ನ ಹಾಗೂ ಅಪಾರ ಪ್ರೀತಿಯನ್ನೆ ತೋರುತ್ತಿದ್ದ ವಿಷ್ಣು, ಚಿತ್ರಲೋಕದ ಅದಮ್ಯ ತಾರೆ.
ಹೆಚ್.ಎಲ್.ನಾರಾಯಣ್ ರಾವ್ ಮತ್ತು ಕಾಮಾಕ್ಷಮ್ಮ ನವರ ಮಗನಾಗಿ ಮೈಸೂರಿನ ಚಾಂಮುಂಡಿಪುರಂ ನಲ್ಲಿ ಜನಿಸಿದ ಈ ಕಲಾವಿದ ಮೈಸೂರು ಮತ್ತು ಬೆಂಗಳೂರಿನಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದರು. ಇವರ ಮೊದಲ ಹೆಸರು ಸಂಪತ್ ಕುಮಾರ. 'ವಂಶವೃಕ್ಷ' ದ ಚಿಕ್ಕ ಪಾತ್ರದಿಂದ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.ಮಹಾನ್ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರನನ್ನು ವಿಷ್ಣುವರ್ಧನ್ ನನ್ನಾಗಿ ಮಾಡಿ 1972ರಲ್ಲಿ 'ನಾಗರ ಹಾವು' ಚಿತ್ರದ ಮೂಲಕ ನಾಯಕ ನಟನನ್ನಾಗಿ ಮಾಡಿದರು. ಆ ಚಿತ್ರದ ರಾಮಾಚಾರಿ ಪಾತ್ರವಂತೂ ಅವರಿಗೆ ಪ್ರಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ 27ನೆ ಫೆಬ್ರವರಿ 1975ರಲ್ಲಿ ಭಾರತಿಯವರನ್ನು ಮದುವೆಯಾಗಿ ಸುಂದರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಕೀರ್ತಿ ಮತ್ತು ಚಂದನ ಎಂಬಿಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಸಂಪೂರ್ಣವಾಗಿ ಕಲಾದೇವಿಯ ಸೇವೆಗೆ ಸನ್ನದ್ಧರಾದರು.ಸುಮಾರು 200 ಚಿತ್ರಗಳಲ್ಲಿ ನಟಿಸಿದ ಇವರ ಕೊನೆಯ ಬಿಡುಗಡೆಯಾದ ಚಿತ್ರ 'ಬಳ್ಳಾರಿ ನಾಗ' ಮತ್ತು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರ ಪಿ.ವಾಸುರವರ 'ಆಪ್ತ ರಕ್ಷಕ'.
---ಸಚಿನ್ ಕುಮಾರ ಬಿ.ಹಿರೇಮಠ
Comments