ಒಂದು ಸಂಜೆಯ ಮಳೆಯ ನಡುವೆ...
ಅದೊಂದು
ದಿನ ಬಾಟನಿ ಪ್ರ್ಯಾಕ್ಟೀಕಲ್ಸ್ ಮುಗಿಸಿಕೊಂಡು ಮರಳುವ ಹೊತ್ತಿಗೆ ಸರಿಯಾಗಿ ಐದು
ಗಂಟೆಯಾಗಿತ್ತು. ಬಸ್ ಸ್ಟಾಪ್ ಗೆ ಹೋಗಬೆಕೆನ್ನುವುಷ್ಟರಲ್ಲಿ ‘ಧೋ’ ಎಂದು ಮಳೆ
ಸುರಿಯಲಾರಂಭಿಸಿತು. ಬಳಿಯಿದ್ದ ಮುಚ್ಚಿದ್ದ ಕ್ಯಾಸೆಟ್ ಅಂಗಡಿ ಮುಗ್ಗಟ್ಟಿನ ಕೆಳಗೆ ನೆಲೆ
ಕಂಡುಕೊಂಡೆ.ಆ ಸುಂದರ ಮಳೆಯನ್ನು ನಾನು ಈ ಹಿಂದೆ ಎಲ್ಲೂ ನೋಡಿರಲಿಲ್ಲ.ಆ ಮಳೆಹನಿಗಳ
ಸೌಂದರ್ಯವನ್ನು ನನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿರುವಾಗಲೇ ಒಬ್ಬ ಸರಿಸುಮಾರು
ಇಪ್ಪತ್ತರ ಸನಿಹದ ಹುಡುಗಿಯೊಬ್ಬಳು ನಾನಿದ್ದ ಅಂಗಡಿ ಮುಗ್ಗಟ್ಟಿಗೆ ಬಂದು ನೆಲೆ
ಕಂಡಳು.ಗಮನಿಸಲಾಗಿ ಅವಳು ನನ್ನ ಗೆಳೆತಿ ಉಷಾ. ಈ ಹಿಂದೆ ಅವಳಿಗೆ ಒಂದು ಪ್ರೇಮ ಪತ್ರ
ಬರೆದು ಅವಾಂತರ ಸೃಷ್ಟಿಸಿದ್ದೆ.ಇಷ್ಟು ದಿನಗಳ ಬಳಿಕ ಸಹಜಕ್ಕಿಂತ ತುಸು ಸಮೀಪದಲ್ಲೆ
ನಿಂತಳು. ನಾನು ಈ ಹಿಂದೆ ಹುಡುಗಿ ಬಳಿ ಇಷ್ಟು ಸನಿಹ ನಿಂತವನಲ್ಲ.ಆವತ್ತಿನ ಘಟನೆಯನ್ನು
ನೆನಸಿಕೊಂಡು ನಾನು ಸುಮ್ಮನಾದೆ. ನನಗ್ಯಾಕೋ ತುಸು ನಾಚಿಕೆಯಾಯಿತು. ಮತ್ತೆ ಗಂಡಸಿಗೆಂತ
ನಾಚಿಕೆ ಅಂತ ಹಾಗೇ ನಿಂತೆ. ಅವಳೂ ಭಾಗಶಃ ತೊಯ್ದು ಹೋಗಿದ್ದಳು. ತನ್ನ ಮೈಯನ್ನೆಲ್ಲಾ
ಲಘುವಾಗಿ ನೀವುತ್ತಿದ್ದಳು.ನಾನು ಅವಳ ಮುಖ ನೋಡುವ ಪ್ರಯತ್ನ ಮಾಡಿದೆ. ತೀಡಿ ತಿದ್ದಿದಂಥ
ಕರಿಹುಬ್ಬು. ಮೀನಿನಂಥ ನಯನಗಳು, ನುಣುಪಾದ ಕೆನ್ನೆ,ನೀಳ ನಾಸಿಕ, ಹೂವಿನಂಥ ತುಟಿಗಳು,
ನೀಳ ಕಾಯದ ದೇಹ, ಹಾಲಿನಂಥ ಬಣ್ಣ..ಹಿಂದೆಂದೂ ಆಗದಂಥ ರೋಮಾಂಚನವಾಯಿತು ನನಗೆ. ಛೇ..!
ಇದೆಲ್ಲ ಆಕರ್ಷಣೆ..Simply she is beautiful ಅಂತ ಸುಮ್ಮನಾದೆ.
ಅವಳ
ಬಳಿ ಕೊಡೆಯಿತ್ತಾದರೂ ಅವಳೇಕೆ ಈ ಅಂಗಡಿ ಮುಗ್ಗಟ್ಟಿಗೆ ಬಂದಳು..? ಎಂದು ನನ್ನನ್ನು
ನಾನೇ ಕೇಳಿಕೊಂಡೆ. ಬಿರುಸಾದ ಮಳೆ.ಕೊಡೆ ತಡೆಯೊಲ್ಲ ಎಂದು ನಾನೇ ಉತ್ತರ ಕಂಡುಕೊಂಡು
ಸುಮ್ಮನಾದೆ. ನಮ್ಮ ನಡುವಿನ ಮೌನ ಯಾಕೋ ಅಸಹನೀಯವಾಗಿತ್ತು. ತಕ್ಷಣ ಅವಳು ನನ್ನೆಡೆಗೆ
ತಿರುಗಿ ‘ಟೈಮೆಷ್ಟು..?’ ಎಂದಾಗ ನನ್ನೆದೆ ಝಲ್ಲೆಂದಿತು. ‘ಓಹ್ ..! ಅದು…ಅದು… ಐದು
ಕಾಲು..’ ಎಂದು ತಡಬಡಿಸಿದೆ. ಅವಳಲ್ಲಿ ತುಸು ನಗೆ ಹೊಗೆಯಾಡಿತು. ‘ಮಳೆ ನಿಲ್ಲೋ ಹಾಗೆ
ಕಾಣುವುದಿಲ್ಲ.. ನಿಮ್ಮ ಬಳಿ ಕೊಡೆಯಿದೆಯಲ್ವಾ..ನೀವು ನಡೆದು ಹೋಗಿ.ಮಳೆ ತುಸು
ಕಡಿಮೆಯಾಗಿದೆ.’ ಎಂದೆ. ಅವಳು ಮಾತನಾಡದೆ ಹೊರಟಳು.ತುಸು ದೂರ ಹೋಗಿ ಅವಳು ತಿರುಗಿ
ನೋಡಿದಾಗ ನನ್ನೆದೆ ಮತ್ತೊಮ್ಮೆ ಝಲ್ಲೆಂದಿತು.
ಅವಳು ನಿಮತಿದ್ದ ಜಾಗೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಅಲ್ಲೊಂದು ಮಡಚಿದ ಕಾಗದ ಬಿದ್ದಿತ್ತು. ಅದನ್ನು ಬಿಡಿಸಿ ಓದಿದೆ.
ಪ್ರೀತಿಯ ಅರುಣ್,
ನಾನು
ಕೆಲವು ದಿನಗಳಿಂದ ನಿನಗೆ ಹೇಳಬೇಕೆಂದುಕೊಂಡ ವಿಷಯವನ್ನು ಹೇಳಲಾಗದೆ ಅದನ್ನು ಈ ಕಾಗದದ
ಮುಖಾಂತರ ನಿನಗೆ ಹೇಳುತ್ತಿದ್ದೇನೆ. ನೋಡು ಅರುಣ್, ನೀನು ತುಂಬಾ ಒಳ್ಳೆಯ
ಹುಡುಗ.ಓದಿನಲ್ಲಿ ನಿನಗ್ಯಾರೂ ಸರಿಸಮರಿಲ್ಲ. ಆದರೆ ಪ್ರೀತಿ ಅನ್ನುವುದು ಜೀವನದ ಒಂದು
ಭಾಗ ಅಷ್ಟೇ..ಅದೇ ಗುರಿ ಅಲ್ಲ.. ನೀನು ಇದನ್ನು ಅರಿತುಕೊಂಡು ನನ್ನನ್ನು ನನ್ನ ಪಾಡಿಗೆ
ಬಿಟ್ಟರೆ ನಾನು ನಿನಗೆ ಚಿರಋಣಿ. ನೀನು ನನ್ನ ಒಳ್ಳೆಯ ಗೆಳೆಯನಾಗಬಹುದು.ಆದರೆ ನನ್ನ ಜೀವನ
ಸಂಗಾತಿಯಾಗಿರಲು ನನ್ನ ಮನಸ್ಸು ಒಪ್ಪುತ್ತಿಲ್ಲ..
ಇಂತಿ ನಿನ್ನ ಗೆಳೆತಿ
ಉಷಾ
ನಾನಾಗ
ಶಬ್ದದರಿದ್ರನಾಗಿದ್ದೆ. ಅವಳ ಮನಸ್ಸಿಗೆ ಗಾಯ ಮಾಡುವ ಅವಕಾಶ ತಂದುಕೊಳ್ಳದೆ ಅವಳಿಗೆ
ಒಬ್ಬ ಒಳ್ಳೆಯ ಮಿತ್ರನಾಗಿರಬೇಕೆಂದುಕೊಂಡೆ. ಸ್ನೇಹ ಪ್ರೀತಿ ಬೆಳೆಸುತ್ತೆ ನಿಜ. ಆದರೆ
ಅದನ್ನು ನಾವು ತಪ್ಪಾಗಿ ತಿಳಿದುಕೊಂಡು ವ್ಯಥೆ ಪಡುವುದರಲ್ಲಿ ಅರ್ಥವಿಲ್ಲವೆಂದುಕೊಂಡು
ರಾತ್ರಿ ಅವಳಿಗೆ ಫೋನಾಯಿಸಿದೆ.’ಹಲೋ ಉಷಾ ನಿನ್ನ ಓಲೈಕೆಗೆ ನಾನು ಬದ್ಧ’ ಎಂದಾಗ ಅವಳು
ಎಂದಿಗಿಂತಲೂ ಖುಷಿಯಾದಳು..ಸ್ನೇಹವನ್ನು ಕಾಪಾಡಿಕೊಂಡುದದರ ಖುಷಿ ಪ್ರೀತಿಯನ್ನು
ಕಳೆದುಕೊಂಡುದದರ ನೋವನ್ನು ಮರೆಸಿತ್ತು.
*** ಸಚಿನ್ ಕುಮಾರ ಬಿ.ಹಿರೇಮಠ
Comments