ಈ ಎರಡಕ್ಷರ ಕಿವಿಗೆ ಬಿದ್ದಾಗ, ಕಣ್ಣಿಗೆ ಕಂಡಾಗ ಎದೆ ಝಲ್ಲೆನ್ನುತ್ತದೆ. ಪ್ರೀತಿಯ ಬಗ್ಗೆ ನಮ್ಮಲ್ಲಿ ಪದಗಳಿಂಗ ಭಾವನೆಗಳೇ ಜಾಸ್ತಿ.ನಮ್ಮ ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸುವುದು ಒಂದು ಕ್ರಮಬದ್ಧವಾದ ವಯಸ್ಸಿನಲ್ಲೇ. ಸ್ಕೂಲುಗಳಲ್ಲಿ, ನಮ್ಮ ನಮ್ಮ ಮನೆಗಳಲ್ಲಿ ನಮ್ಮವರು ಎನಿಸಿಕೊಂಡವರು ನಮ್ಮನ್ನು ಪ್ರೀತಿಸಿರುತ್ತಾರೆ. ಆದರೆ ಅದು ಅಪ್ರಕ್ಷುಬ್ಧ ಪ್ರೀತಿ. ಅದು ಒಂದು ಅನಿವಾರ್ಯತೆಗೆ ಒಳಪಟ್ಟು ಸಂಬಂಧಗಳಲ್ಲಿ ನುಸುಳಿ ಗಟ್ಟಿಗೊಳ್ಳಲು ಪ್ರಯತ್ನಿಸಿ, ಕೊನೆಗೆ ಗಟ್ಟಿಗೊಂಡಿರುತ್ತದೆ. ಅಲ್ಲಿ ಮೊದಲು ಸಂಬಂಧಗಳು ಬೇರೂರಿ ಬಳಿಕ ಕ್ರಮೇಣ ಪ್ರೀತಿಯ ಹೂವರಳಿಸಲಾರಂಭಿಸುತ್ತದೆ. ಅಲ್ಲಿ ಪ್ರೀತಿ ಅನ್ನೋದು 'ಮಾಡಲೇಬೇಕಾದ' ಅನಿವಾರ್ಯತೆ. ಈ ಅನಿವಾರ್ಯತೆ ಕೆಲವೊಮ್ಮೆ optional ಅಂತನ್ನಿಸಿದರೆ ಅಲ್ಲಿನ ಸಂಬಂಧಗಳು ಬಿರುಕು ಬಿಡಲಾರಂಭಿಸುತ್ತವೆ. So ಈ ಪ್ರೀತಿ ನಮಗೆ ಕೆಲವೊಮ್ಮೆ ಹೊಸತು ಎನ್ನಿಸುತ್ತಾದರೂ ಅದು ಅತೀ ಮುಖ್ಯವಾದುದು ಎಂಬುದು ಮಾತ್ರ ನಿಜ. ಈಗ ನಾನು ಹೇಳ ಹೊರಟಿರುವುದು ಈ ತರಹದ ಪ್ರೀತಿಯ ಬಗ್ಗೆ ಅಲ್ಲ. ಹೃದಯವನ್ನು ಹೂವಾಗಿಸುವ, ಹದಿವಯಸುಗಳ ಮನಸ್ಸನ್ನು ಹೊಕ್ಕು ಕಚಗುಳಿಯಿಡುವ, ಮೈ ನವಿರೇಳಿಸುವ ಮದುರ ಅನುಭೂತಿ ನೀಡುವಂಥ ಪ್ರೀತಿ ಬಗ್ಗೆ. 'ಪ್ರೀತ್ಸೋಕೆ ಏನುಬೇಕು' ಅಂತ ಮೊನ್ನೆ ಗೆಳೆಯನೊಬ್ಬ ಕೇಳಿದ. ಏನೊಂದು ತೋಚದೇ ಮೊಬೈಲನ್ನು ಆಚೆಗಿಟ್ಟು ಕುಳಿತುಬಿಟ್ಟೆ. ಮನಸ್ಸು ಒಂಟಿಯಾಗುವುದನ್ನೇ ಕಾಯುತ್ತಿದ್ದ ಈ ಪ್ರಶ್ನೆ ಮತ್ತ...
ತೆವಳದಿರು ಓ ಹೆಣ್ಣೆ..! ನಿನ್ನ ನೀ ಅರಿಯದಲೇ ಸೆರದಿರು ಮತ್ತದೇ… ಅಂಧಕಾರ ಚಿಪ್ಪಿನಲೇ… ಏನು ಸುಖ ಮೃದುತನದಿ? ನಿನ್ನ ಮೆಟ್ಟಿ ನಿಲುವವರೆ ತಾನೂ ಸಖನೆಂದೆನಿಸಿ ಮೈ ಮನ ಕೊಲುವವರೆ.. ನಿನ್ನ ಹೋಲಿಸುವರು ಇಳೆಗೆ ಮೃದು, ಗಟ್ಟಿ ಎರಡೂ ನಿನ್ನಲೇ… ಹಲವು ಮುಖ ಹಲವು ಬಗೆ ಪರಮ ಸುಖ ಒಳಗೊಳಗೆ…. ತೆವಳುವಿಕೆಯ ನೀ ತೊರೆದು ಶಾಂತಿ ದೂತನ ಹಾಗೆ ಚಿಮ್ಮು ಅರಿವಿನ ನಭಕೆ… ಕಾಲ ಕಾಲವಾಗುವವರೆಗೆ.. —ಸಚಿನ್ ಕುಮಾರ ಬಿ.ಹಿರೇಮಠ
ನೀನಾಗಲಿ, ನಿನ್ನ ನೆನಪುಗಳಾಗಲಿ ಬರಕೂಡದೆಂದು ನನ್ನೆದೆಗೆ ಬೀಗ ಜಡೆದುಕೊಂಡು ಕೀಲಿ ಕೈ ಕಳೆದುಕೊಂಡೆ ಸಂಬಂಧಗಳನ್ನೆಲ್ಲಾ ತೊಳೆದುಕೊಂಡೆ ಮನಸಿನೊಳಗೆ ನಿನ್ನ ಕನಸುಗಳು ತೂರದಂತೆ ಬೇಲಿ ಹಾಕಿಕೊಂಡೆ ಕಣ್ಣು ರೆಪ್ಪೆಗಳನ್ನು ಹಿಂಡಿ ನಿನ್ನ ಜಾರಿಕೊಂಡೆ ಇವೆಲ್ಲವನ್ನು ಮೀರಿ ನೀ ನನ್ನೊಳ ಬಂದೆ ಹೇಗೆ ಸಾದ್ಯ ಎಂದಾಗ ಪ್ರೀತಿ ಎಂದೆ ಪ್ರೀತಿ ಇಷ್ಟು ಶಕ್ತವೇ…? — ಸಚಿನ್ ಕುಮಾರ ಬಿ.ಹಿರೇಮಠ
ನಗುವೊಂದು ನಿಂತಿದೆ
ತುಟಿಯ ಅಂಚಲ್ಲೆ
ಎದೆಯ ದುಗುಡವ ತಡವಿಕೊಂಡು
ಮಂದಹಾಸವಾಗಿ
ನಡೆದಷ್ಟು ಕಲ್ಲುಮುಳ್ಳಿನ ಹಾದಿ
ಬದಿಗೆಲ್ಲ ನೋಡಿ ನಗುವವರದೇ ಬೀದಿ
ಕಾರುಣ್ಯ ರಸ ಹಳಸಿದೆ ಎಲ್ಲರಲಿ
ಕಲ್ಲರಳುವ ಸಮಯವಿಲ್ಲ ಇಲ್ಲಿ
ಅಗುಳ ಕಂಡರೇ ಕರೆವ ಕಾಗೆಯಂತಿಲ್ಲ
ಮನುಜ
ಕಂಡರೂ ಕಾಣದಂತಿದ್ದರೆ ಎಲ್ಲವೂ
ಸಹಜ
ಮನ-ಮನದ ನಡುವಿನ ಸೋಪಾನ ಸಡಿಲ
ಬದುಕು ಬಾಳುವುದಿಲ್ಲಿ ಇನ್ನೂ ಜಟಿಲ
ನಗು ತಾ ಹುಟ್ಟಬೇಕಿದೆ ದಿನವೂ
ಮನದ ಕದ ತಟ್ಟಬೇಕಿದೆ ನಗುವು
ಮನಕೆ ಮನದ ಮುದವಾಗಲೇಬೇಕು
ಆಗ ಮಾತ್ರ ಹಸನು ನಂಮ ಬದುಕು
-- ರನ್ನ ಕಂದ
ಸಪ್ಟೆಂಬರ್ 30,2010 ರಂದು ಮಹತ್ತರವಾದ ಅಯೋಧ್ಯೆ ತೀರ್ಪು ಪ್ರಕಟವಾಗಲಿದೆ. ತ್ರಿ ಸದಸ್ಯ ಪೀಠ ನೀಡುವ ಶ್ರೀರಾಮ ಜನ್ಮ ಭೂಮಿ ಕುರಿತಾದ ಐತಿಹಾಸಿಕ ತೀರ್ಪು ಜನಮಾನಸವನ್ನು ಹದಗೆಡಿಸದಿರಲಿ. ತೀರ್ಪು ಏನೇ ಬರಲಿ, ಯಾರ ಪರವೆ ಬರಲಿ ಅದನ್ನು ಗೌರವದಿಂದ ಸ್ವಾಗತಿಸೋಣ. ನ್ಯಾಯ ದೇವತೆಯ ನಿರ್ಧಾರಕ್ಕೆ ಬದ್ಧರಾಗಿರೋಣ. ಕುವೆಂಪುರವರು ಹೇಳಿದಂತೆ ನಾನು ಹಿಂದು, ನಾನು ಮುಸ್ಲಿಂ ಅಂತೆಲ್ಲಾ ಭೇದ ತೋರದೆ ಒಂದಾಗೋಣ. ಅಂದಹಾಗೆ ಶಾಂತಿ ಪ್ರಿಯರಾದ ನಾವು ಧರ್ಮಕ್ಕೆ ನಿಜವಾದ ವ್ಯಾಖ್ಯಾನ ನೀಡೋಣ. ರಾಮರೂ ನಾವೇ, ರಹೀಮರೂ ನಾವೇ..ಮೇಲಾಗಿ ನಾವು ಭಾರತೀಯರೆಂಬುದನ್ನು ಮರೆಯದಿರೋಣ.. --ಸಚಿನ್ ಕುಮಾರ ಬಿ.ಹಿರೇಮಠ , ಜೇವರ್ಗಿ
ಹಾಯ್ ಗೆಳೆಯರೆ, ನಿಮ್ಮ ಒಳಗಿನ ಲೇಖಕ ಲೇಖಕಿಯನ್ನು ಬರೆಯಲು ಕೂಡಿಸಿ. ನಿಮ್ಮ ಬರಹಗಳನ್ನು ನನ್ನ ಿಮೇಲ್ ವಿಳಾಸಕ್ಕೆ ಕಳುಹಿಸಿ. ನನ್ನೊಂದಿಗೆ ಸಾಥ್ ನೀಡಿ.ಸದ್ಯ ಮುಧೋಳದ ನನ್ನ ತಮ್ಮ ನವೀನ್ ಕುಮಾರ ಬಿ.ಹಿರೇಮಠ, ಗೆಳತಿ ರಾಜೆಶ್ವರಿ ಬಿ.ಕೆ ಹಾಗೂ ಗೆಳೆಯ ಸಂಗಮೇಶ ಯಾಳವಾರ ಈ ಸಲ ನಿಮ್ಮ ಮುಂದಿದ್ದಾರೆ.. -ಸಚಿನ್ ಕುಮಾರ ಬಿ.ಹಿರೇಮಠ, sachin_b1985@yahoo.co.in
ಚೆಲುವೆ ಮತ್ತೇ ಬಂತು ಚಳಿಗಾಲ ಮೈ ಕೊರೆವ ಚಳಿ ನನಗೆ ಅಪ್ಪಿತಪ್ಪಿಯೂ ನೆನಪಾಗುತ್ತಿಲ್ಲ ಬೆಚ್ಚಗಿನ ಹೊದಿಕೆ ಆದರೆ ಬೆಂಬಿಡದೆ ಕಾಡುತಿವೆ ನಿನ್ನಪ್ಪುಗೆಯಲಿ ಕಳೆದ ಬೆಚ್ಚನೆಯ ಗತರಾತ್ರಿಗಳ ನೆನಕೆ.. ----ಮಹಾಂತೇಶ ದೊಡ್ಡಮನಿ
ಸೂಕ್ಷ್ಮದರ್ಶಕದಲ್ಲಿ ಸಮಾಜವೊಂದು ಸವಿಸ್ತಾರವಾಗಿ ತೋರುತ್ತಿದೆ... ಹಸಿರು,ನೀರು,ಗಾಳಿ ಘಮಲು.. ನಡುವೆ ವಿಷದ ಹೂಂಕರಿಕೆ,ಕೊಚ್ಚೆ,ಬರೀ ಅಮಲು.. ಗೂಗಲಿನೋಪಾದಿಯಲಿ ತಲೆ ಉಳ್ಳವರ ನಡುವೆ ಖಾಲಿ ಮನಸುಗಳು ಹಲವು... ಎದೆಯ ಬಸಿದು ಬದುಕ ನೀಡುವವರ ಜತೆಗೆ ಕಾಂಕ್ರೀಟಿನ ಎದೆಯುಳ್ಳವರ ತೊರೆದ ಒಲವು.. ನಿಸ್ತೇಜ ಬಾನಿನಲ್ಲಿ ಸತ್ತು ಬಿದ್ದ ತಾರೆಗಳ ರೀತಿ ಮನದ ಅಂಗಳದಲ್ಲಿ ದಿಕ್ಕಾಪಾಲಾಗಿದೆ ನೀತಿ... ಮಹಲುಗಳಲಿ ಕಲ್ಲು ಹೊತ್ತವರ ಬೆವರು ಇನ್ನೂ ಕಾಣಸಿಗುತ್ತದೆ ಆಸೆ ಪಟ್ಟಾಗ ಬರೀ ಹತಾಶೆಯ ಉಸಿರು... ಇನ್ನಷ್ಟು ಹಿಗ್ಗಿಸಿದಾಗ, ಸತ್ಯಗಳ ಕಂತೆಯ ಹೊದ್ದ ಸುಳ್ಳಿನ ಹೊದಿಕೆ ನಿಚ್ಚಳವಾಗುವುದು ಸತ್ಯಮೇವ ಜಯತೇ... ಆಗಾಗ ನಗುತ್ತಾರೆ ಬುದ್ಧ ಬಸವ ಗಾಂಧೀ ಅಂಬೇಡ್ಕರ್ ನಗೆಯ ಕಾರಣ ಕಾಣಿಸುವುದಿಲ್ಲ.. ಯಾವುದೇ ಮಸೂರ ಹುಡುಕಿ... ಸಿಗುವುದಿಲ್ಲ... --- ರನ್ನ ಕಂದ
Comments